ಮೂರು ದಶಕಗಳ ಸಿನಿ ಪಯಣ ಭಾವುಕ ಪತ್ರ ಬರೆದ ಸುದೀಪ್

ಈ ಐತಿಹಾಸಿಕ ಕ್ಷಣವನ್ನು ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ. ಈ ಸಂಭ್ರಮದ ಭಾಗವಾಗಿ ವಿಶೇಷ ಕಾಮನ್ ಡಿಪಿ (CDP) ಬಿಡುಗಡೆ ಮಾಡಲಾಗುತ್ತಿದ್ದು, ಅದನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಬಿಡುಗಡೆ ಮಾಡಿ ಸುದೀಪ್ ಅವರಿಗೆ ಶುಭಾಶಯ ಕೋರಲಿದ್ದಾರೆ ಎಂಬುದು ವಿಶೇಷ.

ದಿಗ್ಗಜರ ಕೈಯಲ್ಲಿ CDP ರಿಲೀಸ್

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ನಟರಾದ ಶಿವರಾಜ್‌ಕುಮಾರ್, ಸುನೀಲ್ ಶೆಟ್ಟಿ, ಧ್ರುವ ಸರ್ಜಾ, ನಟಿಯರಾದ ರುಕ್ಮಿಣಿ ವಸಂತ್, ಅಶಿಕಾ ರಂಗನಾಥ್, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್, ನಟ ಸಾಯಿಕುಮಾರ್, ಮಾಜಿ ಸಂಸದ ಪ್ರತಾಪ್ ಸಿಂಹ, ನಟಿ ಜೆನಿಲಿಯಾ, ನಾಯಕ ನಟ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಸುದೀಪ್ ಅವರ 30 ವರ್ಷಗಳ ಸಂಭ್ರಮದ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಲಿದ್ದಾರೆ.

ಇತ್ತ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯಕ್ಕಾಗಿ ಕಿಚ್ಚ ಸುದೀಪ್ ಅವರು ಕೊಯಮತ್ತೂರಿನಲ್ಲಿ ಇದ್ದು, ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯವನ್ನು ಗೆದ್ದು ತಮ್ಮ ನಾಯಕನಿಗೆ ಉಡುಗೊರೆಯಾಗಿ ಅರ್ಪಿಸಲು ಕರ್ನಾಟಕ ಬುಲ್ಡೋಜರ್ಸ್ ತಂಡ ಸಜ್ಜಾಗಿದೆ.

ಭಾವುಕ ಪತ್ರ ಬರೆದ ಕಿಚ್ಚ

ತಮ್ಮ 30 ವರ್ಷಗಳ ಸಿನಿ ಪಯಣದ ಕುರಿತು ಸುದೀಪ್ ಅವರು ಭಾವುಕರಾಗಿ ಪತ್ರ ಬರೆದಿದ್ದಾರೆ.

“ಈ ಹುಚ್ಚು, ಸುಂದರವಾದ ಸಿನಿಮಾ ಜಗತ್ತಿನಲ್ಲಿ ಮೂರು ದಶಕಗಳ ಪಯಣದ ನಂತರ ಇಂದು ಇಲ್ಲಿ ನಿಂತಾಗ ನನ್ನ ಹೃದಯ ತುಂಬಿ ಬಂದಿದೆ. ಕಣ್ಣಲ್ಲಿ ಕನಸು, ಮನದಲ್ಲಿ ಗೊಂದಲ ಮತ್ತು ಅತಿಯಾದ ಭರವಸೆ ಹೊತ್ತ ಹುಡುಗನಾಗಿದ್ದ ನಾನು ಇಂದು ಇಲ್ಲಿವರೆಗೆ ಬಂದಿದ್ದೇನೆ. ಇದಕ್ಕೆಲ್ಲಾ ಏಕೈಕ ಕಾರಣ ನೀವು – ನನ್ನ ಅಭಿಮಾನಿ ದೇವರುಗಳು. ನೀವೇ ನನ್ನ ಶಕ್ತಿ, ನನ್ನ ಉಸಿರು,” ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಸಿನಿಮಾ ಸಮೂಹ ಕಲೆ’

ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಮತ್ತು ತಂತ್ರಜ್ಞರಿಗೆ ಧನ್ಯವಾದ ತಿಳಿಸಿದ ಸುದೀಪ್,

“ನಿಮ್ಮ ಕಥೆಗಳ ಮೂಲಕ ನನ್ನನ್ನು ನಂಬಿದ್ದಕ್ಕೆ, ನನ್ನಿಂದ ಇನ್ನಷ್ಟು ಉತ್ತಮವನ್ನು ನಿರೀಕ್ಷಿಸಿ ತಿದ್ದಿದಕ್ಕಾಗಿ ನಿರ್ದೇಶಕರು ಹಾಗೂ ಬರಹಗಾರರಿಗೆ ಧನ್ಯವಾದ. ನಿರ್ಮಾಪಕರ ಧೈರ್ಯವೇ ನನ್ನ ಕನಸುಗಳಿಗೆ ಜೀವ ನೀಡಿತು. ಲೈಟ್ ಬಾಯ್ಸ್‌ನಿಂದ ಹಿಡಿದು ಎಡಿಟರ್‌ಗಳವರೆಗೆ, ತೆರೆಯ ಹಿಂದೆ ಹರಿಯುವ ನಿಮ್ಮ ಬೆವರ ಹನಿಯೇ ಸಿನಿಮಾದ ನಿಜವಾದ ಗೆಲುವು,” ಎಂದು ಹೇಳಿದ್ದಾರೆ.

‘ಕನ್ನಡ ಚಿತ್ರರಂಗ ನನ್ನ ತಾಯಿ’

ಮಾಧ್ಯಮ, ಕುಟುಂಬ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ ಅವರು,

“ಮಾಧ್ಯಮ ಮಿತ್ರರು ನನ್ನ ಧ್ವನಿಯಾದರು. ಕನ್ನಡ ಚಿತ್ರರಂಗ ನನಗೆ ಅಸ್ಮಿತೆ, ಹೆಮ್ಮೆ ಮತ್ತು ಆಸರೆ ನೀಡಿದ ತಾಯಿ. ನನ್ನ ಕುಟುಂಬ ಮತ್ತು ಸ್ನೇಹಿತರು ಈ ಪಯಣದುದ್ದಕ್ಕೂ ನನ್ನ ಕಾಲು ನೆಲದ ಮೇಲೆ ಇರಲು ಕಾರಣರಾದರು,” ಎಂದು ಮನದಾಳದ ಮಾತು ಹಂಚಿಕೊಂಡಿದ್ದಾರೆ.

‘ವಿನಯವೇ ಈ ಪಯಣದ ಪಾಠ’

ಪತ್ರದ ಕೊನೆಯಲ್ಲಿ ಸುದೀಪ್ ಅವರು,

“ಈ 30 ವರ್ಷಗಳು ನನಗೆ ಕಲಿಸಿದ ಪಾಠ ‘ವಿನಯ’. ಇಲ್ಲಿ ಸಿಗುವ ಪ್ರತಿಯೊಂದು ಗೆಲುವು ಎರವಲು ಪಡೆದದ್ದೇ. ಇನ್ನಷ್ಟು ಕಠಿಣ ಪರಿಶ್ರಮ ಮಾಡುತ್ತೇನೆ, ಈ ಕಲೆಗೆ ಗೌರವ ಸಲ್ಲಿಸುತ್ತೇನೆ ಮತ್ತು ಸಿನಿಮಾ ನನಗೆ ನೀಡಿದುದನ್ನೆಲ್ಲ ಮರಳಿ ನೀಡುತ್ತೇನೆ,” ಎಂದು ಭಾವಪೂರ್ಣವಾಗಿ ಹೇಳಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-31 16:16:08
No Reviews