ಔಷಧಿಗಳಿಗೆ ಕತ್ತರಿ? ಗ್ಯಾರಂಟಿ ಯೋಜನೆಗಳ ಹಿಂದೆ ಏನಿದೆ?

ದೇವನಹಳ್ಳಿ, ಮೇ 13: ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸುವ ಭರಾಟೆಯಲ್ಲಿ ಆರೋಗ್ಯ ಇಲಾಖೆಯ ಮೆಡಿಸಿನ್‌ಗಳಿಗೆ (Medicine) ಕತ್ತರಿ ಹಾಕಲಾಗಿದೆಯೇ ಎಂಬ ಅನುಮಾನ ಈಗ ಸಾರ್ವಜನಿಕರಲ್ಲಿ ಮೂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ತೀವ್ರ ಕೊರತೆ ಎದುರಾಗಿದ್ದು, ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಮುಖ್ಯಾಂಶಗಳು

  • ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆಂಟಿಬಯೋಟಿಕ್ ಮಾತ್ರೆ ಹಾಗೂ ಚುಚ್ಚುಮದ್ದುಗಳ ತೀವ್ರ ಅಭಾವ
  •  ಎಕ್ಸ್‌ರೇ ಶೀಟ್ ಇಲ್ಲದೆ ರೋಗಿಗಳು ಮೊಬೈಲ್‌ನಲ್ಲಿ ಫೋಟೋ ಹಿಡಿಯುವ ದುಸ್ಥಿತಿ
  •  ಗ್ಯಾರೆಂಟಿ ಯೋಜನೆಗಳ ಅಬ್ಬರದಲ್ಲಿ ಬಡವರ ಆರೋಗ್ಯ ಸೇವೆಗೆ ಸರ್ಕಾರದಿಂದ ಕತ್ತರಿ

ಆಂಟಿಬಯೋಟಿಕ್ ಮಾತ್ರೆಗಳಿಲ್ಲ!

ತಾಲೂಕು ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಜ್ವರ, ನೆಗಡಿ ಮತ್ತು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಆಂಟಿಬಯೋಟಿಕ್ ಮಾತ್ರೆಗಳು ಲಭ್ಯವಿಲ್ಲ. ವೈದ್ಯರು ಬರೆದುಕೊಡುವ ಬಹುತೇಕ ಮದ್ದುಗಳು ಆಸ್ಪತ್ರೆಯ ಫಾರ್ಮಸಿಯಲ್ಲಿ ಸಿಗುತ್ತಿಲ್ಲ. ಆಂಟಿಬಯೋಟಿಕ್ ಚುಚ್ಚುಮದ್ದುಗಳ ಕೊರತೆಯೂ ಕಾಡುತ್ತಿದ್ದು, ಲಭ್ಯವಿರುವ ಇಂಜೆಕ್ಷನ್‌ಗಳನ್ನು ಮಾತ್ರ ನೀಡಿ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ದುರಂತ: ಐದು ವರ್ಷದ ಮಗು ಸಾವು

ತಮ್ಮ ಮೊಬೈಲ್​ನಲ್ಲೇ ಎಕ್ಸ್‌ರೇ ಫೋಟೋ ತಗೊಳ್ಳುತ್ತಿರುವ ರೋಗಿಗಳು

ಆಸ್ಪತ್ರೆಯ ಅವ್ಯವಸ್ಥೆ ಇಲ್ಲಿಗೆ ನಿಂತಿಲ್ಲ. ಎಕ್ಸ್‌ರೇ ಮಾಡಿಸಿದ ರೋಗಿಗಳಿಗೆ ಫಿಲ್ಮ್ ಗ್ರಾಫ್ ಶೀಟ್ ನೀಡಲಾಗುತ್ತಿಲ್ಲ. ರೋಗಿಗಳೇ ತಮ್ಮ ಮೊಬೈಲ್‌ನಲ್ಲಿ ಎಕ್ಸ್‌ರೇ ಫೋಟೋ ಹಿಡಿದುಕೊಂಡು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಔಷಧಗಳಿಗಾಗಿ ಇಂಡೆಂಟ್ ಸಲ್ಲಿಸಿ ಹಲವು ದಿನಗಳು ಕಳೆದರೂ ಇಲಾಖೆಯಿಂದ ಸರಬರಾಜಾಗಿಲ್ಲ ಎಂದು ಸಿಬ್ಬಂದಿಯೇ ಒಪ್ಪಿಕೊಳ್ಳುತ್ತಿದ್ದಾರೆ. ದೇವನಹಳ್ಳಿ ತಾಲೂಕು ಆಸ್ಪತ್ರೆಯ ಸ್ಥಿತಿಯನ್ನು ಕಂಡು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರ ಕೂಡಲೇ ಬಡವರ ಆರೋಗ್ಯದ ಕಡೆ ಗಮನಹರಿಸಬೇಕಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-13 13:34:22
No Reviews