ಬಹುಮತ ಇಲ್ಲದೆ ವಿಜಯ್ ಸಿಎಂ? ಕೋರ್ಟ್ ಮೆಟ್ಟಿಲೇರುತ್ತಾ ಟಿವಿಕೆ!

ತಮಿಳುನಾಡಿನ ರಾಜಕೀಯದಲ್ಲಿ ಭಾರೀ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಸೂಪರ್‌ಸ್ಟಾರ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಈ ಚುನಾವಣೆಯಲ್ಲಿ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ ಹಾಗೂ ಎಐಎಡಿಎಂಕೆ  ದ್ರಾವಿಡ ದಿಗ್ಗಜ ಪಕ್ಷಗಳನ್ನು ಹಿಂದಿಕ್ಕಿ ಟಿವಿಕೆ ಹೊಸ ಇತಿಹಾಸ ಬರೆದಿದೆ. ಆದರೆ ಜನರ ಭಾರೀ ಬೆಂಬಲ ಸಿಕ್ಕಿದ್ದರೂ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಟಿವಿಕೆಗೆ ಸಿಗಲಿಲ್ಲ.

234 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಆದರೆ ಟಿವಿಕೆಗೆ ಇನ್ನೂ 11 ಶಾಸಕರ ಕೊರತೆ ಇದೆ. ಕಾಂಗ್ರೆಸ್ ಪಕ್ಷ ಬೆಂಬಲ ಘೋಷಿಸಿದ್ದರೂ, ಸರ್ಕಾರ ರಚನೆಗೆ ಬೇಕಾದ ಸಂಖ್ಯೆ ಇನ್ನೂ ಪೂರ್ಣವಾಗಿಲ್ಲ. ಇದೇ ಕಾರಣಕ್ಕೆ ವಿಜಯ್ ಮುಂದಿನ ಹೆಜ್ಜೆ ಬಗ್ಗೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಾಗಿದೆ.

2018ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಎದುರಿಸಿದ್ದಂತಹ ಪರಿಸ್ಥಿತಿ ಈಗ ವಿಜಯ್ ಎದುರಿಸುತ್ತಿದ್ದಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆರಂಭದಲ್ಲಿ ಕಾಂಗ್ರೆಸ್‌ನ ಷರತ್ತುಬದ್ಧ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಟಿವಿಕೆ ಹಕ್ಕು ಮಂಡಿಸಲು ಸಿದ್ಧವಾಗಿತ್ತು. ಸಣ್ಣ ಪಕ್ಷಗಳ ಬೆಂಬಲದಿಂದ ಸಂಖ್ಯೆ ಹೆಚ್ಚಿಸಬಹುದು ಎನ್ನುವ ಲೆಕ್ಕಾಚಾರವೂ ಪಕ್ಷದೊಳಗಿತ್ತು.

ಆದರೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾದ ವೇಳೆ ಪರಿಸ್ಥಿತಿ ಬದಲಾಗಿದೆ ಎಂದು ಹೇಳಲಾಗುತ್ತಿದೆ. ಕೇವಲ 112 ಶಾಸಕರ ಬೆಂಬಲದೊಂದಿಗೆ ಸರ್ಕಾರವನ್ನು ಹೇಗೆ ನಡೆಸುತ್ತೀರಿ ಎಂದು ರಾಜ್ಯಪಾಲರು ಪ್ರಶ್ನೆ ಎತ್ತಿದ್ದಾರೆ ಎನ್ನಲಾಗಿದೆ. 118 ಶಾಸಕರ ಬೆಂಬಲ ಪತ್ರ ಸಲ್ಲಿಸಿದ ಬಳಿಕವೇ ಪ್ರಮಾಣವಚನ ಸಾಧ್ಯ ಎಂದು ರಾಜ್ಯಪಾಲರು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಬೆಳವಣಿಗೆಯಿಂದ ಟಿವಿಕೆ ಕಾನೂನು ಹೋರಾಟದ ದಾರಿ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂಬುದು ಟಿವಿಕೆಯ ವಾದ. ಕಾಂಗ್ರೆಸ್ ಬೆಂಬಲವೂ ಇರುವುದರಿಂದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವ ಸನ್ನಾಹ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಸಿಪಿಐ(ಎಂ) ಮತ್ತು ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷಗಳು ಕೂಡ ಟಿವಿಕೆಗೆ ಬೆಂಬಲ ಸೂಚಿಸಿವೆ. ಈ ಎಲ್ಲಾ ಬೆಳವಣಿಗೆಗಳು ತಮಿಳುನಾಡಿನ ರಾಜಕೀಯವನ್ನು ಮತ್ತಷ್ಟು ರೋಚಕವಾಗಿಸಿವೆ.

ಡಿಎಂಕೆ ಕೂಡ ರಾಜ್ಯಪಾಲರ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಜನಾದೇಶಕ್ಕೆ ಇದು ಅವಮಾನ ಎಂದು ಹೇಳಿದೆ. ನಟ ಕಮಲ್ ಹಾಸನ್ ಕೂಡ ವಿಜಯ್ ಪರವಾಗಿ ಮಾತನಾಡಿದ್ದಾರೆ. ಒಂದು ವೇಳೆ ಯಾವುದೇ ಪಕ್ಷವೂ ಸ್ಪಷ್ಟ ಬಹುಮತ ತೋರಿಸಲು ವಿಫಲವಾದರೆ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆಯೂ ಇದೆ. ಹಾಗಾದರೆ ತಮಿಳುನಾಡು ಮತ್ತೆ ಮರುಚುನಾವಣೆಯ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಹೆಚ್ಚಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-07 17:40:02
No Reviews