ಸದನದ ಕಲಾಪ ಅಸ್ತವ್ಯಸ್ತ; 8 ವಿಪಕ್ಷ ಸಂಸದರು ಔಟ್

ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಮಂಗಳವಾರ ನಡೆದ ಅಹಿತಕರ ಘಟನೆಯೊಂದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸದನದ ಶಿಷ್ಟಾಚಾರಕ್ಕೆ ಧಕ್ಕೆ ತಂದ ಆರೋಪದ ಮೇಲೆ ಎಂಟು ವಿರೋಧ ಪಕ್ಷದ ಸಂಸದರನ್ನು ಬಜೆಟ್ ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸುವಂತೆ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ.

ಅಮಾನತುಗೊಂಡ ಸಂಸದರ ಪೈಕಿ ಪಂಜಾಬ್‌ನ ಲುಧಿಯಾನ ಸಂಸದ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಲಾ, ಕೇರಳದ ಇಡುಕ್ಕಿ ಸಂಸದ ಡೀನ್ ಕುರಿಯಾಕೋಸ್ ಹಾಗೂ ಎರ್ನಾಕುಲಂ ಸಂಸದ ಹಿಬಿ ಈಡನ್, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ರಾಜಂಪೇಟೆ ಸಂಸದ ಕಿರಣ್ ಕುಮಾರ್ ರೆಡ್ಡಿ, ತಮಿಳುನಾಡಿನ ವಿರುದುನಗರ ಸಂಸದ ಮಾಣಿಕ್ಕಂ ಟ್ಯಾಗೋರ್, ಮಧುರೈ ಸಂಸದ ಎಸ್. ವೆಂಕಟೇಶನ್ ಮತ್ತು ಮಹಾರಾಷ್ಟ್ರದ ಭಂಡಾರಾ–ಗೊಂಡಿಯಾ ಸಂಸದ ಪ್ರಶಾಂತ್ ಪೊಡೊಲೆ ಸೇರಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿದ ಸಭಾಪತಿ ಓಂ ಬಿರ್ಲಾ, “ಸದನದೊಳಗಿನ ಇಂತಹ ನಡವಳಿಕೆ ಸಂಸತ್ತಿನ ಶಿಷ್ಟಾಚಾರದ ಗಂಭೀರ ಉಲ್ಲಂಘನೆ. ಬಜೆಟ್ ಅಧಿವೇಶನದಂತಹ ಮಹತ್ವದ ಕಲಾಪಗಳಲ್ಲಿ ಈ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ” ಎಂದು ಸ್ಪಷ್ಟವಾಗಿ ಎಚ್ಚರಿಸಿದರು.

ಅಮಾನತಿಗೆ ಕಾರಣವೇನು?

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಪುಸ್ತಕದ ಕುರಿತು ಮಾತನಾಡಲು ಮುಂದಾದಾಗ, ಸ್ಪೀಕರ್ ಅದಕ್ಕೆ ಅಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಉದ್ವಿಗ್ನಗೊಂಡ ಕೆಲ ಕಾಂಗ್ರೆಸ್ ಸಂಸದರು ಸದನದೊಳಗೆ ಕಾಗದಗಳನ್ನು ಎಸೆದು, ಸಭಾಪತಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪೀಕರ್‌ಗೆ ದೂರು ನೀಡಿದರು. ಈ ದೂರಿನ ಆಧಾರದಲ್ಲೇ ಸ್ಪೀಕರ್ ಓಂ ಬಿರ್ಲಾ ಅವರು ಎಂಟು ಸಂಸದರನ್ನು ಅಮಾನತುಗೊಳಿಸುವ ನಿರ್ಣಯ ಕೈಗೊಂಡರು.

ಈ ಅಮಾನತು ನಿರ್ಧಾರದಿಂದಾಗಿ ಲೋಕಸಭೆಯ ವಾತಾವರಣ ಇನ್ನಷ್ಟು ಬಿಸಿಯಾಗಿದ್ದು, ಸರ್ಕಾರ–ವಿರೋಧ ಪಕ್ಷಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಸಂಸತ್ತಿನ ಗೌರವ ಮತ್ತು ಶಿಷ್ಟಾಚಾರವೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆಧಾರವೆಂದು ಸಭಾಪತಿಗಳು ಪುನರುಚ್ಚರಿಸಿದ್ದು, ಈ ಘಟನೆ ಬಜೆಟ್ ಅಧಿವೇಶನದ ಮೇಲೆಯೇ ನೆರಳು ಬೀರುವಂತಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-03 17:45:10
No Reviews